ಸೋಮವಾರ, ಜೂನ್ 12, 2017

ಬದುಕು ದೊಂಬರಾಟ

ಯೋಚಿಸಬೇಕಿತ್ತೆ
ನಾ ಉಸಿರುವಮುನ್ನ,
ಬೇರುಗಳ ಸಡಿಲಿಸಿ
ಬೇರುಬಿಡಬೇಕಿದೆ,
ಕನಸಿನರಾಜ್ಯದೊಳು
ವ್ಯಾಜ್ಯಗಲಿಲ್ಲ ನೋಡು

ನಿನ್ನೊಳೊಂದಾದೆ
ಪದ ಗಾಳದಿ,
ಕತ್ತಲಿನಾಳದ ಬೇರುಗಳು
ನಮ್ಮುಸಿರ ಹೀರಲು
ನಿನ್ನಸಿರನುಳಿಸಿದೆ;
ಇನ್ನೇನು ನೀಡಲಾಗಲಿಲ್ಲ
ನೀಗುವಮುನ್ನ,

ಕ್ಷಮೆಯಿರಲಿ
ಜೊತೆಗೆರಡು ಕೊಡಲಿ
ಕಡಿಯಬೇಕು
ಕಡಿದು ಬದುಕಬೇಕು
ನವಿರುಭವಾಗಳ
ನೆತ್ತರಿನಿಂದ
ಕಾಪಿಡಬೇಕು
ಬದುಕು ದೋಂಬರಾಟ
-ದೀಪಕ್

ಶುಕ್ರವಾರ, ಜೂನ್ 2, 2017

4

ಮರದ ಕೆಳಗೆ ತಾನು ಕೂತು
ಕೊಳಲ ಮೇಲೆ ಬೆರಳನಿಟ್ಟು
ತುಟಿಯನೊತ್ತಿ  ಉಸಿರುಕೊಟ್ಟು
ಸುಧೆಯ ಹರಿಸುತಿದ್ದನು

ನೀರಿಗಾಗಿ ಬಂದ ರಾಧೆ
ಮನದಪೂರ ಅವನ ಬಾಧೆ
ನೀರಮರೆತು
ಗಾನದಲ್ಲೇ ಮಿಂದು ನೆನೆದು ಎದ್ದಳು
ಮುರುಳಿಗಾನ ಮೋಹನಾಂಗ
ಭಾವಬಿರಿದು ಹಾಡುತಿರಲು
ನರ್ತಿಸುವರ
ಗೆಜ್ಜೆಹೆಜ್ಜೆಗೆ
ಇಳೆಯು ಪುಳಕಗೊಂಡಿತು

ತುಂಬು ಕಳೆಯ
ಹಾಸು ಹೊದ್ದು ಮಲಗಿರಲು
ಲತೆಯತುಂಬ ಮಲ್ಲೆ ಘಮಲು
ಊರತುಂಬಿ ಹರಡಿರಲು
ಚೋರನಿವನು
ಎದೆಯಭಾವ ಹರಿ ಹರಿದು
ರಾಗ ಹೊಮ್ಮಿಸುತಿದ್ದನು
ಮೈಮರೆತ ಭೂಮಿತಾಯಒಡಲು
ಕಣ್ಣುಮುಚ್ಚಿ
ನಾದಪುಳಕದಿ
ತಾಳಹಾಕುತಿದ್ದಿತು

3

ಕೊಳಲ ನಾದ
ಆಹಾ ಸ್ವಾದ
ಕೇಳಲಿಂಪು
ನಿರ್ವಿವಾದ
ಕಣ್ಣ ಮುಚ್ಚಿ ಕರಣ ಬಿಚ್ಚೆ
ಮೈಮನ ರೋಮಾಂಚನ

ನದಿಯ ಹಾಗೆ
ಸ್ವರವು ಹರಿಯೆ
ಸ್ವಾದಿಸುವರು
ಆಲಿಸುವರು
ಭುಜಿಸಿ ಭಜಿಸಿ
ನೃತ್ಯಿಸುವರು
ಕೇಳಲಿವನ
ಮುರಳಿನಾದ
ಬದುಕು ಪುಳಕ
ಎನುವರು
-ದೀಪಕ್

2

ಕೊಳಲ ಮೊರೆತ
ಏನೋ ಸೆಳೆತ
ಕೇಳುತೆಲ್ಲ ಸ್ಥಂಭೀಭೂತ

ನಾದ ಹೊಮ್ಮುತಿರಲು
ಹೊರಗೆ
ಧುಮುಕುತಿತ್ತು
ಕೇಳ್ವ ಕಿವಿಗೆ
ಬೆರಳ ವರಸೆ
ನಾದವನ್ನು
ಏರುಪೇರು ಮಾಡಲು

ಎದೆಯ ಭಾವ ಹೊರಗೆ ಹರಿದು
ಕೊಳಲಿನೊಡಲ ತುಂಬುತಿರಲು
ಬೆರಳನಾಟ್ಯ ಭಾವಲಾಸ್ಯ
ಕಣ್ಣುಮನವ ತುಂಬಿತು
-ದೀಪಕ್

ಗುರುವಾರ, ಜೂನ್ 1, 2017

1

ಕಡೆವಕೋಲ ದೂರತಳ್ಳಿ
ಮೊಸರ ಗಡಿಗೆ ಹಿಂದೆ ಬಿದ್ದು
ಸಿಕ್ಕ ಬೆಣ್ಣೆಯನ್ನು ಮೆದ್ದು
ಕೊಳಲ ನುಡಿಸುತಿದ್ದನು

ಕೊಳಲ ನುಡಿಸೆ
ಮನವ ತಣಿಸೆ
ಕುಡಿದಂತೆ
ಹಾಲು ಬೊಗಸೆ
ನೆರೆದರು ಸೊಗಸ ಕೇಳಲು
ಮೇಯುತಿದ್ದ ತರುಗಳೆಲ್ಲ
ಆಲಿಸುತ್ತ ನಿಂತವು

ನೀರತರಲು ಹೊರಟ ನೀರೆ
ದನಿಯ ಕೇಳಿ ಸನಿಹ ಬಾರೆ
ಮುದ್ದು ಕಂದನನ್ನು ಕಂಡು
ಜಗವ ಮರೆತು ಬಿಟ್ಟಳು
-ದೀಪಕ್

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.